ಭಕ್ತಿರಸ ಮತ್ತು ಶಾಸ್ತ್ರೀಯ ರಾಗದ ಸಂಗಮ – ಭಾರತೀ ಆಚಾರ್ಯರ ಸಂಗೀತಯಾನ

ಭಾರತೀ ಶ್ರೀಧರ ಆಚಾರ್ಯ (ಬ್ರಹ್ಮಾವರ) ಅವರು ಶಾಸ್ತ್ರೀಯ ಸಂಗೀತದ ಹಾಡುಗಾರಿಕೆ ವಿಭಾಗದಲ್ಲಿ 2023–24ನೇ ಸಾಲಿನ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ, ಮೈಸೂರು ವತಿಯಿಂದ ನಡೆಸಲಾದ ಹಿಂದೂಸ್ತಾನಿ ಸೀನಿಯರ್ ಪರೀಕ್ಷೆಯನ್ನು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಸಂಗೀತದ ಆಸಕ್ತಿ ಇವರಲ್ಲಿ ಅತಿ ಚಿಕ್ಕ ವಯಸ್ಸಿನಿಂದಲೇ ಹುಟ್ಟಿಕೊಂಡಿತ್ತು. ಮನೆಯಲ್ಲೇ ಹಿರಿಯರು ಹಾಡುತ್ತಿದ್ದ ಭಜನೆಗಳನ್ನು ಕೇಳುತ್ತಾ, ಅವರೊಂದಿಗೆ ಗಾಯನ ಮಾಡುತ್ತಾ ಇದೇ ತಮ್ಮ ಹವ್ಯಾಸವಾಗಿತ್ತು. ಕಾಲಕ್ರಮೇಣ ಇದು ಗಾಯನದಲ್ಲಿ ಸಾಧನೆ ಮಾಡಲು ಪ್ರೇರಣೆಯಾಯಿತು. ಈ ಉತ್ಸಾಹದಿಂದಲೇ ಅವರು ಉಡುಪಿಯ ಯು. ಎನ್. ರಮೇಶ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಎರಡು ವರ್ಷಗಳ ಕಾಲ ಅಭ್ಯಾಸ ಮಾಡಿದರು. ನಂತರ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಹಿಂದೂಸ್ತಾನಿ ಸಂಗೀತ ಪ್ರಾಥಮಿಕ (ಗ್ರೇಡ್) ಪರೀಕ್ಷೆಯನ್ನು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದರು.

ಜೂನಿಯರ್ ಪದವಿಯನ್ನು ಮುಗಿಸಿದ ನಂತರ, ಭಾರತೀ ಅವರು ಸಾಹೇಬರಕಟ್ಟೆಯ ವಿದ್ವಾನ್ ಅಶೋಕ್ ಆಚಾರ್ಯರ ಬಳಿ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಹಾಗೂ ಹಾರ್ಮೋನಿಯಂ ಅಭ್ಯಾಸವನ್ನು ಮುಂದುವರೆಸಿದರು. ತದನಂತರ, ಹಿಂದೂಸ್ತಾನಿ ಶಾಸ್ತ್ರೀಯ ಸೀನಿಯರ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವುದು ಇವರ ನಿರಂತರ ಪರಿಶ್ರಮ ಮತ್ತು ಸಂಗೀತದತ್ತ ಇರುವ ನಿಷ್ಠೆಯ ಫಲವಾಗಿದೆ.

ಪ್ರಸ್ತುತ, ಅವರು ಸಾಹೇಬರಕಟ್ಟೆಯ ರಾಗಶ್ರೀ ಸಂಗೀತ ಶಿಕ್ಷಣ ಕೇಂದ್ರದಲ್ಲಿ ವಿದ್ವತ್ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದು, ಅಲ್ಲಿ ಸಂಗೀತ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ, ಹಾರ್ಮೋನಿಯಂ ವಾದಕರಾಗಿಯೂ ಖ್ಯಾತಿ ಪಡೆದಿದ್ದಾರೆ. ಸಂಗೀತಾಸಕ್ತ ವಿದ್ಯಾರ್ಥಿಗಳಿಗೆ ಶ್ರದ್ಧೆಯಿಂದ ತರಬೇತಿ ನೀಡುತ್ತಿರುವ ಇವರು, ಭಜನೆ ಕಾರ್ಯಕ್ರಮಗಳ ಮೂಲಕ ಅನೇಕ ಹಬ್ಬೋತ್ಸವ, ಉತ್ಸವ ವೇದಿಕೆಗಳಲ್ಲಿ ತಮ್ಮ ತಂಡದೊಂದಿಗೆ ಭಾಗವಹಿಸುತ್ತಾ ಬಂದಿದ್ದಾರೆ.

ಕಾರ್ಕಳ, ಮುಂಬೈ, ಬಾರಕೂರು, ಉಡುಪಿ, ಮಂಗಳೂರು, ಸುರತ್ಕಲ್, ಕಟಪಾಡಿ, ಕುತ್ಯಾರು, ರಂಗನಕೇರಿ ಹಾಗೂ ಬ್ರಹ್ಮಾವರದ ಹಲವು ಗಣೇಶೋತ್ಸವ ವೇದಿಕೆಗಳಲ್ಲಿ ಅವರು ತಮ್ಮ ಭಜನಾ ತಂಡದೊಂದಿಗೆ ಕಾರ್ಯಕ್ರಮ ನೀಡಿ ಶ್ರೋತರನ್ನು ಆಕರ್ಷಿಸಿದ್ದಾರೆ.

ಇವರ ಪ್ರತಿಭೆ ಮತ್ತು ಸಾಧನೆಯನ್ನು ಗುರುತಿಸಿ:

  • ರೋಟರಿ ಹಂಗಾರಕಟ್ಟೆ-ಸಾಸ್ತಾನ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ
  • ರೋಟರಿ ಕ್ಲಬ್ ಬ್ರಹ್ಮಾವರ ಹಾಗೂ ಕೊಕ್ಕರ್ಣೆಗಳಿಂದ ಗೌರವ, ಸನ್ಮಾನ

Related Articles